ಕೊಳ್ಯೂರು ರಾಮಚ೦ದ್ರ ರಾವ್’ರಿಗೆ ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ನವ೦ಬರ್ 17 , 2014
|
ಒಕ್ಟೋಬರ್ 31, 2014
|
ಕೋಲ್ಯೂರು ರಾಮಚ೦ದ್ರ ರಾವ್’ರಿಗೆ ಸನ್ಮಾನ
ಬೆಂಗಳೂರು :
ಬಂಟ್ವಾಳ ತಾಲೂಕಿನ ಕರೋಪಡಿಯಲ್ಲಿ 9-11-1932ರಲ್ಲಿ ಜನಿಸಿದ ಕೆ. ರಾಮಚಂದ್ರರಾವ್ ಯಕ್ಷಗಾನ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿದವರು. 13ನೇ ವಯಸ್ಸಿನಲ್ಲೇ ಕಲಾರಂಗ ಪ್ರವೇಶಿಸಿದ ರಾಯರು, ಓದಿದ್ದು 8ನೇ ತರಗತಿಯವರೆಗೇ ಆದರೂ, ನೂರಾರು ಶಿಷ್ಯರಿಂದ ಅತ್ಯುತ್ತಮ ಯಕ್ಷಗಾನ ಗುರು ಎಂದು ಹೊಗಳಿಸಿಕೊಂಡಿದ್ದಾರೆ.
ಹತ್ತು ಹಲವು ಮೇಳಗಳಲ್ಲಿ ಸೇವೆ ಸಲ್ಲಿಸಿರುವ ರಾಯರ ಸ್ತ್ರೀಪಾತ್ರ ಇಂದೂ ಕಣ್ಣಿಗೆ ಕಟ್ಟಿದಂತಿದೆ ಎನ್ನುತ್ತಾರೆ, ಯಕ್ಷಗಾನ ಪ್ರಿಯರು. ಧರ್ಮಸ್ಥಳ ಯಕ್ಷಗಾನ ಮಿತ್ರ ಮಂಡಳಿ, ಕಟೀಲು ಮೇಳ, ಕೂಡ್ಲು ಮೇಳ, ಸುರತ್ಕಲ್ ಮೇಳ, ಕದ್ರಿ ಸೋಮೇಶ್ವರ ಮೇಳ, ಕರ್ನಾಟಕ ಮೇಳ, ಬಪ್ಪನಾಡು ಮೇಳಗಳಲ್ಲಿಯೂ ರಾಯರು ಸಲ್ಲಿಸಿದ ಸೇವೆ ಅನುಪಮ. ಅಭಿಮನ್ಯು, ಬಭ್ರುವಾಹನ, ರಾಮ, ಕೃಷ್ಣನ ಪಾತ್ರಗಳಿಗೆ ಜೀವಕಳೆ ತುಂಬಿದ ಕೀರ್ತಿಯೂ ರಾಯರದು.
ಮುಂಬಯಿ, ಮದ್ರಾಸ್, ದೆಹಲಿ, ಬರೋಡ, ಬೆಹರೇನ್ ಮೊದಲಾದ ಸ್ಥಳಗಳಲ್ಲಿ ಮೇಳ ನಡೆಸುವ ಮೂಲಕ ಕನ್ನಡ ಮಣ್ಣಿನ ಸೊಗಡನ್ನು ಕಡಲಾಚೆಯೂ ಪಸರಿಸಿದ ರಾಮಚಂದ್ರರಾವ್ ಅವರಿಗೆ ಸಂದ ಪ್ರಶಸ್ತಿಗಳು ನೂರಾರು. ಕರ್ನಾಟಕ ಜನಪದ ಅಕಾಡಮೆ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಗೌರವ, ಡಾ. ಬಿ.ಬಿ. ಶೆಟ್ಟಿ ಪ್ರಶಸ್ತಿ ಪಡೆದ ರಾಯರಿಗೆ ಈ ಬಾರಿಯ ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆಯ ಭಾರ್ಗವ ಪ್ರಶಸ್ತಿ (ಯಕ್ಷಗಾನ )ದೊರೆತಿದೆ. ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದಲ್ಲಿ 7 ವರ್ಷಗಳ ಕಾಲ ಶಿಕ್ಷಕರಾಗಿಯೂ ರಾಯರು ದುಡಿದಿದ್ದಾರೆ.
|
|
|